ಹೃದಯ ಸಾಮ್ರಾಜ್ಞಿ
ಭೇದಿಸಲಾಗದ ರಣತಂತ್ರಗಳ ಕಣ್ಣಲ್ಲೇ ಹೆಣೆದಿಹಳು, ಕೇಳರಿಯದ ಕಾಳಗಗಳ ಎದುರಿಸುತ್ತಿದೆ ಬಡಪಾಯಿ ಹೃದಯ, ವ್ಯಾಕುಲ ಮನದಿ ಏಕಾಂಗಿಯಾಗಿ ಹೋರಾಡುತ್ತಿರುವೆ ನಿಶಸ್ತ್ರನಾಗಿ, ಇಲ್ಲಿ ಪರವಶವೇ ಪರಮಜಯವೆಂದು ಅರಿತಿರುವೆ. ಅವಳಂದಗಳ ಅಸ್ತ್ರಗಳು ಶರಣಾಗತಿಗೆ ಸಮೀಪಿಸುವಂತೆ ಪಿಡಿಸುತ್ತಿವೆ, ಅವಳ ಮೌನದ ಹೊಡೆತಗಳಿಗೆ ಮಾಗದ ಗಾಯಗಳು ಮೂಡಿವೆ ಹೃದಯದಲ್ಲಿ, ಅವಳಂದಕ್ಕೆ ಗಾಯಗೊಂಡಿರುವ ಮನಸ್ಸು ಸೋಲೇ ಸ್ವರ್ಗವೆಂದು ಒಪ್ಪಿಕೊಂಡಿದೆ. ಪರವಶನಾಗಲೆಂದಿನಿಸಿದಾಗಲೊಮ್ಮೆ ವಿರಹದ ಭಯ ಹೋರಾಟಕ್ಕೆ ಪ್ರೇರಣೆ ನಿಡುತ್ತಿದೆ, ಸಾಗಲಿ ಸುಂದರ ಕದನವೆನ್ನುತ್ತಿದೆ ವಿಚಲಿತ ಮನಸ್ಸು , ಬಿಡದ ಹೊಡೆತಗಳಿಗೆ ಸೋತ ಹೃದಯ ಆನಂದಿಸುತ್ತಿದೆ ಅವಳಂದಗಳೆಂಬ ಅಸ್ತ್ರಗಳ. ನಾನಿರುವ ಪ್ರೇಮಸಮರದಲ್ಲಿ ವಿರಹವೆ ಸಾವು, ಸಾಮರಸ್ಯವೇ ಸ್ವರ್ಗ, ಪರಾಜಯವೇ ಪ್ರೀತಿ, ಅರಿತಾಗಿದೆ ಇಂದು ಅವಳು ಹೃದಯಸಾಮ್ರಾಜ್ಞಿ ಎಂದು. ...................ನಿಶಸ್ತ್ರಧಾರಿ ಬಸವ